ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೆಳಕೆ ಗ್ರಾಮದ ಯುವತಿಯೊಬ್ಬರು ಬೆಂಗಳೂರಿನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಕುಟುಂಬ ಹಾಗೂ ಗ್ರಾಮಸ್ಥರನ್ನು ದುಃಖದಲ್ಲಿ ಮುಳುಗಿಸಿದೆ. ಕೆ.ಆರ್. ಪುರಂ ಸಮೀಪ ನಡೆದ ಈ ಅಪಘಾತದಲ್ಲಿ ಮತ್ತೊಬ್ಬ ಯುವತಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತ ಯುವತಿಯನ್ನು ಬೆಳಕೆ ಗ್ರಾಮದ ದೀಪಾಲಿ ಗುರುಗೊಂಡ ಎಂದು ಗುರುತಿಸಲಾಗಿದೆ. ಲಭ್ಯ ಮಾಹಿತಿಯಂತೆ, ಅವರು ತಮ್ಮ ಸಹೋದ್ಯೋಗಿಗಳೊಂದಿಗೆ ಮದುವೆ ಸಮಾರಂಭದಲ್ಲಿ ಭಾಗವಹಿಸಿ ವಾಪಸ್ಸಾಗುತ್ತಿದ್ದ ವೇಳೆ ಪ್ರಯಾಣಿಸುತ್ತಿದ್ದ ವಾಹನ ಅಪಘಾತಕ್ಕೀಡಾಗಿದೆ.
ಅಪಘಾತದ ವೇಳೆ ಮತ್ತೊಬ್ಬ ಯುವತಿ ಗಂಭೀರವಾಗಿ ಗಾಯಗೊಂಡಿದ್ದು, ಆಕೆಯನ್ನು ರಕ್ಷಿಸುವ ಕಾರ್ಯಕ್ಕೆ ಆದ್ಯತೆ ನೀಡಲಾಗಿತ್ತು. ಈ ಸಂದರ್ಭ ದೀಪಾಲಿ ಅವರಿಗೆ ಮೇಲ್ನೋಟಕ್ಕೆ ಸಣ್ಣ ಪ್ರಮಾಣದ ಗಾಯಗಳಾಗಿರುವಂತೆ ಕಂಡುಬಂದಿತ್ತು.
ಅಪಘಾತದ ಬಳಿಕ ದೀಪಾಲಿ ಅವರು ತಮ್ಮ ತಂದೆಯ ಮೊಬೈಲ್ ಸಂಖ್ಯೆ ಹಾಗೂ ಮನೆಯ ವಿಳಾಸವನ್ನು ಅಲ್ಲಿದ್ದವರಿಗೆ ಸ್ವತಃ ತಿಳಿಸಿದ್ದರು. ಆದರೆ ಬಳಿಕ ತಲೆ ಹಾಗೂ ದೇಹದ ಒಳಭಾಗದಲ್ಲಿ ತೀವ್ರ ರಕ್ತಸ್ರಾವ ಮತ್ತು ಆಂತರಿಕ ಗಾಯಗಳ ಪರಿಣಾಮ ಅವರು ಏಕಾಏಕಿ ಕುಸಿದು ಬಿದ್ದಿದ್ದು, ಆಸ್ಪತ್ರೆಗೆ ಸಾಗಿಸುವ ಮುನ್ನವೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮರಣೋತ್ತರ ಪರೀಕ್ಷೆ ಪೂರ್ಣಗೊಂಡ ಬಳಿಕ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದ್ದು, ಸ್ವಗ್ರಾಮ ಬೆಳಕೆಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ.
ಈ ಸಂಬಂಧ ಕೆ.ಆರ್. ಪುರಂ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ದೀಪಾಲಿ ಅವರ ಅಕಾಲಿಕ ನಿಧನದಿಂದ ಕುಟುಂಬದ ಸದಸ್ಯರು, ಬಂಧು-ಬಳಗ ಹಾಗೂ ಗ್ರಾಮಸ್ಥರಲ್ಲಿ ತೀವ್ರ ಶೋಕ ಮನೆ ಮಾಡಿದೆ.
ಮತ್ತಷ್ಟು ಓದಿ :
ಗೋವಾದ ಬಾಗಾ ಬೀಚ್ನಲ್ಲಿ ದಾರುಣ ಘಟನೆ : ಅಲೆಗಳ ಅಬ್ಬರಕ್ಕೆ ಬಂಡೆಯಿಂದ ಕೊಚ್ಚಿಹೋದ ವಿಜಯಪುರದ ಯುವಕ ಸಾವು












1 thought on “ಬೆಂಗಳೂರು ರಸ್ತೆ ಅಪಘಾತದಲ್ಲಿ ಭಟ್ಕಳದ ಯುವತಿ ದೀಪಾಲಿ ಗುರುಗೊಂಡ ದುರ್ಮರಣ; ಕೆ.ಆರ್. ಪುರಂನಲ್ಲಿ ಸಂಭವಿಸಿದ ದುರಂತ”