ಬಂಟ್ವಾಳ: ಹಣ ಸಂಗ್ರಹಿಸಿಕೊಂಡು ಬೈಕ್ನಲ್ಲಿ ತೆರಳುತ್ತಿದ್ದ ಸಂಸ್ಥೆಯ ಉದ್ಯೋಗಿಯನ್ನು ಅಡ್ಡಗಟ್ಟಿ ತಲವಾರು ತೋರಿಸಿ ಬೆದರಿಸಿದ ನಾಲ್ವರು ದುಷ್ಕರ್ಮಿಗಳು ₹8.52 ಲಕ್ಷ ನಗದು ದೋಚಿಕೊಂಡು ಪರಾರಿಯಾಗಿರುವ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಣಿನಾಲ್ಕೂರು ಮುಲ್ಕಾಜೆಮಾಡದಲ್ಲಿ ನಡೆದಿದೆ.
ಹಣ ಸಂಗ್ರಹಿಸಿ ತೆರಳುತ್ತಿದ್ದ ಉದ್ಯೋಗಿಗೆ ದರೋಡೆ
ಮಂಗಳೂರಿನ ಕಣ್ಣೂರು ಪ್ರದೇಶದಲ್ಲಿರುವ ಸಿಮೆಂಟ್ ಹಾಗೂ ಕಬ್ಬಿಣ ಮಾರಾಟ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಮಯ್ಯದಿ (40) ದರೋಡೆಗೊಳಗಾದ ಉದ್ಯೋಗಿ ಎಂದು ತಿಳಿದುಬಂದಿದೆ.
ಸಂಸ್ಥೆಯ ವ್ಯವಹಾರಕ್ಕೆ ಸಂಬಂಧಿಸಿದ ಹಣವನ್ನು ವಿವಿಧ ಅಂಗಡಿಗಳಿಂದ ಸಂಗ್ರಹಿಸುವ ಜವಾಬ್ದಾರಿ ಹೊಂದಿದ್ದ ಮಯ್ಯದಿ, ಗುರುವಾರ ಹಲವು ಅಂಗಡಿಗಳಿಂದ ಹಣ ಪಡೆದುಕೊಂಡು ಬೈಕ್ನಲ್ಲಿ ಕಕ್ಕೆಪದವು ಮೂಲಕ ಪಾಣೆಮಂಗಳೂರು ಕಡೆಗೆ ತೆರಳುತ್ತಿದ್ದರು.
ಮಧ್ಯಾಹ್ನ ಸುಮಾರು 1 ಗಂಟೆ ವೇಳೆಗೆ ಮಣಿನಾಲ್ಕೂರು ಮುಲ್ಕಾಜೆ ಮಾಡ ಬಳಿ ಬರುತ್ತಿದ್ದಾಗ ಎರಡು ಬೈಕ್ಗಳಲ್ಲಿ ಬಂದ ನಾಲ್ವರು ಅಪರಿಚಿತರು ಅವರ ವಾಹನವನ್ನು ಅಡ್ಡಗಟ್ಟಿದ್ದಾರೆ ಎನ್ನಲಾಗಿದೆ.
ತಲವಾರು ತೋರಿಸಿ ₹8.52 ಲಕ್ಷ ಸುಲಿಗೆ
ನಾಲ್ವರು ವ್ಯಕ್ತಿಗಳು ತಲವಾರು ತೋರಿಸಿ ಮಯ್ಯದಿ ಅವರನ್ನು ಬೆದರಿಸಿದ್ದು, ಬಳಿಕ ಅವರ ಬಳಿ ಇದ್ದ ₹8,52,000 ನಗದು ಹಣವನ್ನು ಬಲವಂತವಾಗಿ ಕಸಿದುಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹಣ ದೋಚಿಕೊಂಡ ನಂತರ ಆರೋಪಿಗಳು ಎರಡು ಬೈಕ್ಗಳಲ್ಲಿ ಸ್ಥಳದಿಂದ ವೇಗವಾಗಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆರೋಪಿಗಳ ಗುರುತು ಹಾಗೂ ಅವರು ಪರಾರಿಯಾಗಿರುವ ಮಾರ್ಗದ ಕುರಿತು ಮಾಹಿತಿ ಕಲೆಹಾಕಲಾಗುತ್ತಿದ್ದು, ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಮತ್ತಷ್ಟು ಓದಿ :
ಸೈಬರ್ ವಂಚನೆಗೆ ಕಡಿವಾಣ: ಇನ್ಮುಂದೆ ಒಬ್ಬರಿಗೆ ಗರಿಷ್ಠ 9 ಸಿಮ್ ಕಾರ್ಡ್! ಕೇಂದ್ರದಿಂದ ಹೊಸ ನಿಯಮ











1 thought on “ಬಂಟ್ವಾಳದಲ್ಲಿ ತಲವಾರು ತೋರಿಸಿ ₹8.52 ಲಕ್ಷ ದರೋಡೆ; ನಾಲ್ವರು ಅಪರಿಚಿತರಿಗಾಗಿ ಪೊಲೀಸರ ಶೋಧ”