ಬೆಂಗಳೂರು: ರಾಜ್ಯದಲ್ಲಿ ಮಾರಾಟವಾಗುತ್ತಿರುವ ಪಾನ್ ಮಸಾಲಾ ಹಾಗೂ ಗುಟ್ಕಾ ಉತ್ಪನ್ನಗಳಲ್ಲಿ ಅಮಲು ಉಂಟುಮಾಡುವ ಪದಾರ್ಥಗಳ ಮಿಶ್ರಣದ ಬಗ್ಗೆ ವ್ಯಕ್ತವಾಗಿರುವ ಅನುಮಾನಗಳ ನಡುವೆಯೇ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ರಾಜ್ಯಾದ್ಯಂತ ವಿಶೇಷ ಕಾರ್ಯಾಚರಣೆ ಆರಂಭಿಸಿದೆ. ಮೊದಲ ದಿನವೇ ವಿವಿಧ ಜಿಲ್ಲೆಗಳ ಅಂಗಡಿಗಳಿಂದ 32 ಪಾನ್ ಮಸಾಲಾ ಮಾದರಿಗಳನ್ನು ಅಧಿಕಾರಿಗಳು ಸಂಗ್ರಹಿಸಿದ್ದಾರೆ.
ಬೆಂಗಳೂರು, ಮೈಸೂರು, ರಾಯಚೂರು, ಯಾದಗಿರಿ, ಕಲಬುರಗಿ, ಬೀದರ್, ಬೆಳಗಾವಿ ಹಾಗೂ ಬಳ್ಳಾರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿರುವ ಪಾನ್ ಮಸಾಲಾ ಮಾರಾಟ ಮಳಿಗೆಗಳ ಮೇಲೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಬುಧವಾರ ಸಂಗ್ರಹಿಸಿದ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸುವ ಪ್ರಕ್ರಿಯೆ ಆರಂಭವಾಗಿದ್ದು, ಗುರುವಾರವೂ ರಾಜ್ಯದ ವಿವಿಧ ಭಾಗಗಳಲ್ಲಿ ತಪಾಸಣೆ ಮುಂದುವರಿಯುವ ಸಾಧ್ಯತೆ ಇದೆ.
ಸಿಎಂ ಎಚ್ಚರಿಕೆ ಬಳಿಕ ಚುರುಕಾದ ಇಲಾಖೆ
ಇತ್ತೀಚೆಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಪಾನ್ ಮಸಾಲಾ, ಗುಟ್ಕಾ ಸೇರಿದಂತೆ ಕೆಲವು ಉತ್ಪನ್ನಗಳಲ್ಲಿ ಅಮಲು ಉಂಟುಮಾಡುವ ಅಂಶಗಳನ್ನು ಸೇರಿಸಲಾಗುತ್ತಿದೆ ಎಂಬ ಮಾಹಿತಿ ಸರ್ಕಾರದ ಗಮನಕ್ಕೆ ಬಂದಿದೆ ಎಂದು ಹೇಳಿದ್ದರು. ಈ ಆರೋಪಗಳು ಸತ್ಯವೆಂದು ದೃಢಪಟ್ಟರೆ, ರಾಜ್ಯದಲ್ಲಿ ಎಲ್ಲ ರೀತಿಯ ಪಾನ್ ಮಸಾಲಾ ಮತ್ತು ಗುಟ್ಕಾ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸುವ ಕುರಿತು ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದ್ದರು.
ಮುಖ್ಯಮಂತ್ರಿಯ ಈ ಹೇಳಿಕೆಯ ಬೆನ್ನಲ್ಲೇ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ರಾಜ್ಯಮಟ್ಟದಲ್ಲಿ ವಿಶೇಷ ತಪಾಸಣೆ ಆರಂಭಿಸಿದ್ದು, ಉತ್ಪನ್ನಗಳ ಗುಣಮಟ್ಟ ಹಾಗೂ ಕಾನೂನುಬದ್ಧತೆಯನ್ನು ಪರಿಶೀಲಿಸಲು ಮಾದರಿಗಳನ್ನು ಸಂಗ್ರಹಿಸುತ್ತಿದೆ.
ಆಯುಕ್ತರಿಂದ ವಿಶೇಷ ನಿರ್ದೇಶನ
ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಯುಕ್ತರು ಈಗಾಗಲೇ ಅಧಿಕಾರಿಗಳಿಗೆ ವಿಶೇಷ ಸುತ್ತೋಲೆ ಹೊರಡಿಸಿದ್ದು, ಜೂನ್ 30 ಹಾಗೂ ಜುಲೈ 1ರಂದು ರಾಜ್ಯಾದ್ಯಂತ ಪಾನ್ ಮಸಾಲಾ ಮತ್ತು ಪಾನ್ ಆಧಾರಿತ ಇತರೆ ಉತ್ಪನ್ನಗಳ ವಿರುದ್ಧ ವಿಶೇಷ ಅಭಿಯಾನ ನಡೆಸುವಂತೆ ಸೂಚಿಸಿದ್ದಾರೆ.
ಈ ವೇಳೆ ಸಂಗ್ರಹಿಸಲಾದ ಕಾನೂನುಬದ್ಧ ಆಹಾರ ಮಾದರಿಗಳನ್ನು ರಾಜ್ಯ ಹಾಗೂ ಪ್ರಾದೇಶಿಕ ಸರ್ಕಾರಿ ಆಹಾರ ಪರೀಕ್ಷಾ ಪ್ರಯೋಗಾಲಯಗಳಿಗೆ ಕಳುಹಿಸಿ ವೈಜ್ಞಾನಿಕ ವಿಶ್ಲೇಷಣೆ ನಡೆಸುವಂತೆ ನಿರ್ದೇಶಿಸಲಾಗಿದೆ. ಜೊತೆಗೆ, ಪಾನ್ ಮಸಾಲಾ ಹಾಗೂ ಸಂಬಂಧಿತ ಉತ್ಪನ್ನಗಳ ಸಗಟು ಮಾರಾಟ ಮಳಿಗೆಗಳಿಗೂ ಭೇಟಿ ನೀಡಿ ದಾಖಲೆಗಳ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಸಂಗ್ರಹಿಸಲಾದ ಪ್ರತಿಯೊಂದು ಆಹಾರ ಮಾದರಿಯ ವಿವರವನ್ನು ಸಂಬಂಧಿತ ಪ್ರಯೋಗಾಲಯದ ಮಾಹಿತಿಯೊಂದಿಗೆ ದಾಖಲಿಸಬೇಕು. ಈ ವಿಶೇಷ ಕಾರ್ಯಾಚರಣೆಯ ಮೇಲ್ವಿಚಾರಣೆಯನ್ನು ಆಯಾ ಜಿಲ್ಲೆಯ ನಾಮನಿರ್ದೇಶಿತ ಅಧಿಕಾರಿಗಳು ನಡೆಸಿ, ಸಮಗ್ರ ವರದಿಯನ್ನು ಇಲಾಖೆಯ ಕೇಂದ್ರ ಕಚೇರಿಗೆ ಸಲ್ಲಿಸುವಂತೆ ಜೂನ್ 29ರಂದು ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.
ಮತ್ತಷ್ಟು ಓದಿ :
ದಕ್ಷಿಣ ಕನ್ನಡದಲ್ಲಿ ಜುಲೈ 2ರಂದು ಶಾಲೆ–ಕಾಲೇಜುಗಳಿಗೆ ರಜೆ; ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಆದೇಶ
10ನೇ ತರಗತಿ ವಿದ್ಯಾರ್ಥಿ ಅಮಾನತು, ಶಾಲೆಯ ಶೌಚಾಲಯದಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ತಾಯಿ












1 thought on “ಗುಟ್ಕಾ-ಪಾನ್ ಮಸಾಲಾ ಮೇಲೆ ರಾಜ್ಯವ್ಯಾಪಿ ದಾಳಿ; ಸಿಎಂ ಎಚ್ಚರಿಕೆ ಬೆನ್ನಲ್ಲೇ 32 ಮಾದರಿ ಸಂಗ್ರಹ”