ಮಂಗಳೂರು : ಮಳೆಗಾಲ ಆರಂಭವಾಗುತ್ತಿದ್ದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಮಾಲೆ (ಜಾಂಡಿಸ್) ಪ್ರಕರಣಗಳು ಹೆಚ್ಚಳವಾಗುತ್ತಿವೆ. ಕಳೆದ ಒಂದು ವಾರದ ಅವಧಿಯಲ್ಲಿ ಮಂಗಳೂರಿನಲ್ಲಿ ಸುಮಾರು 15 ಮಂದಿಯಲ್ಲಿ ಕಾಮಾಲೆ ಸೋಂಕು ದೃಢಪಟ್ಟಿದ್ದು, ಆರೋಗ್ಯ ಇಲಾಖೆ ಎಚ್ಚರಿಕೆ ವಹಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದೆ.
ಆರಂಭದಲ್ಲಿ ಬಂದರು ಪ್ರದೇಶದಲ್ಲಿ ಮಾತ್ರ ಪ್ರಕರಣಗಳು ವರದಿಯಾಗಿದ್ದರೆ, ಇದೀಗ ಡೊಂಗರಕೇರಿ ಭಾಗಗಳಲ್ಲಿಯೂ ಸೋಂಕಿನ ಪ್ರಕರಣಗಳು ಪತ್ತೆಯಾಗುತ್ತಿವೆ. ಪರಿಸ್ಥಿತಿಯನ್ನು ಗಮನಿಸಿದ ಅಧಿಕಾರಿಗಳು ಸಂಬಂಧಿತ ಪ್ರದೇಶಗಳಿಗೆ ಭೇಟಿ ನೀಡಿ ಕುಡಿಯುವ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದಾರೆ.
ಪ್ರಾಥಮಿಕ ಪರೀಕ್ಷೆಯಲ್ಲಿ ಪಾಲಿಕೆಯಿಂದ ಪೂರೈಕೆಯಾಗುತ್ತಿರುವ ಕುಡಿಯುವ ನೀರು ಸುರಕ್ಷಿತವಾಗಿದೆ ಎಂಬ ವರದಿ ಲಭ್ಯವಾಗಿದೆ. ಆದರೆ ಕೆಲವು ಮನೆಗಳ ನೀರಿನ ಸಂಪ್ಗಳನ್ನು ಸಮರ್ಪಕವಾಗಿ ಸ್ವಚ್ಛಗೊಳಿಸದ ಕಾರಣ ಅಲ್ಲಿನ ನೀರು ಕಲುಷಿತಗೊಂಡಿರುವುದು ಪತ್ತೆಯಾಗಿದೆ. ಇನ್ನೂ ಕೆಲವು ಪ್ರದೇಶಗಳ ನೀರಿನ ಮಾದರಿಗಳ ಪರೀಕ್ಷಾ ವರದಿ ನಿರೀಕ್ಷಿಸಲಾಗುತ್ತಿದೆ.
ಕೆಲವು ದಿನಗಳ ಹಿಂದೆ ಮಂಗಳೂರಿನ ಬಿಜೈ ನ್ಯೂ ರೋಡ್ ಹಾಗೂ ಬಟ್ಟಗುಡ್ಡೆ ಪ್ರದೇಶಗಳಲ್ಲಿ ಕುಡಿಯುವ ನೀರು ಸೇವಿಸಿದ ಬಳಿಕ ಹಲವರು ಅಸ್ವಸ್ಥಗೊಂಡ ಘಟನೆ ಕೂಡ ವರದಿಯಾಗಿತ್ತು.
ಕಾಮಾಲೆಯ ಲಕ್ಷಣಗಳೇನು?
ವೈದ್ಯರ ಪ್ರಕಾರ ಕಾಮಾಲೆ ಕಾಣಿಸಿಕೊಂಡರೆ ಕಣ್ಣು ಹಾಗೂ ಚರ್ಮದ ಬಣ್ಣ ಹಳದಿಯಾಗುವುದು, ಮೂತ್ರದ ಬಣ್ಣ ಗಾಢವಾಗುವುದು, ಮಲದ ಬಣ್ಣದಲ್ಲಿ ಬದಲಾವಣೆ, ತೀವ್ರ ಆಯಾಸ, ವಾಕರಿಕೆ, ಹೊಟ್ಟೆ ನೋವು ಮತ್ತು ಹಸಿವಿನ ಕೊರತೆ ಮೊದಲಾದ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಜ್ವರದ ಜೊತೆಗೆ ಇಂತಹ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷಿಸದೆ ತಕ್ಷಣ ವೈದ್ಯರನ್ನು ಸಂಪರ್ಕಿಸುವಂತೆ ಸಲಹೆ ನೀಡಲಾಗಿದೆ.
ಸಾರ್ವಜನಿಕರು ಪಾಲಿಸಬೇಕಾದ ಮುನ್ನೆಚ್ಚರಿಕೆಗಳು
ಕಾಮಾಲೆ ಸಾಮಾನ್ಯವಾಗಿ ಕಲುಷಿತ ನೀರು ಮತ್ತು ಆಹಾರದ ಮೂಲಕ ಹರಡುವುದರಿಂದ ಕುಡಿಸಿ ಆರಿಸಿದ ನೀರನ್ನೇ ಸೇವಿಸುವುದು ಉತ್ತಮ. ರಸ್ತೆ ಬದಿಯ ಆಹಾರ ಹಾಗೂ ತೆರೆದಿಟ್ಟ ಆಹಾರ ಪದಾರ್ಥಗಳನ್ನು ಸೇವಿಸುವುದನ್ನು ಸಾಧ್ಯವಾದಷ್ಟು ತಪ್ಪಿಸಬೇಕು. ಮನೆಯ ನೀರಿನ ಸಂಗ್ರಹ ಟ್ಯಾಂಕ್ ಮತ್ತು ಸಂಪ್ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುವ ಮೂಲಕ ಸೋಂಕಿನ ಅಪಾಯವನ್ನು ಕಡಿಮೆ ಮಾಡಬಹುದು.
ಮತ್ತಷ್ಟು ಓದಿ
ಬಂಟ್ವಾಳದಲ್ಲಿ ಅಪ್ರಾಪ್ತ ಕಾಲೇಜು ವಿದ್ಯಾರ್ಥಿನಿ ಮೇಲೆ ಮಚ್ಚಿನಿಂದ ಹಲ್ಲೆ; ಆರೋಪಿ ಪೊಲೀಸರಿಗೆ ಶರಣು














1 thought on “ಮಂಗಳೂರಿನಲ್ಲಿ ಕಾಮಾಲೆ ಪ್ರಕರಣಗಳ ಏರಿಕೆ; ಒಂದೇ ವಾರದಲ್ಲಿ 15 ಮಂದಿಗೆ ಸೋಂಕು ದೃಢ”