ಮೂರು ವಾರಗಳಿಂದ ಕಾಣೆಯಾಗಿದ್ದ ಚಿನ್ನು ಸಿಕ್ಕಿತು! ಕೊಟ್ಟ ಮಾತಿನಂತೆ ₹50 ಸಾವಿರ ಬಹುಮಾನ ನೀಡಿದ ಶ್ವಾನಪ್ರೇಮಿ
ದಕ್ಷಿಣ ಕನ್ನಡ ಜಿಲ್ಲೆಯ ಮುರ ಪೋಳ್ಯದಲ್ಲಿ ನಾಪತ್ತೆಯಾಗಿದ್ದ ‘ಚಿನ್ನು’ ಹೆಸರಿನ ದೇಸಿ ತಳಿಯ ನಾಯಿ ಪತ್ತೆಯಾಗಿದ್ದು, ವಾಗ್ದಾನದಂತೆ ಅದರ ಸುಳಿವು ನೀಡಿದವರಿಗೆ 50,000 ರೂಪಾಯಿ ಬಹುಮಾನ ನೀಡಿ ಗಣೇಶ್ ಕೇರ ಅವರು ಸುದ್ದಿಯಾಗಿದ್ದಾರೆ. ಈ ಮಾನವೀಯ ನಡೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಗಣೇಶ್ ಕೇರ ಅವರು ತಮ್ಮ ಮನೆಯಲ್ಲಿ ಸುಮಾರು 30 ನಾಯಿಗಳನ್ನು ಪ್ರೀತಿಯಿಂದ ಸಾಕುತ್ತಿದ್ದು, ಅವುಗಳಲ್ಲಿ ‘ಚಿನ್ನು’ ಹೆಸರಿನ ದೇಸಿ ತಳಿಯ ನಾಯಿಯು ಫಿಟ್ಸ್ ಸಮಸ್ಯೆಯಿಂದ ಕಾಲಿನ ಸ್ವಾಧೀನ ಕಳೆದುಕೊಂಡಿತ್ತು. ಸುಮಾರು ಮೂರು ವಾರಗಳ ಹಿಂದೆ ಈ ನಾಯಿ ಕಾಣೆಯಾಗಿದ್ದು, ಇದರಿಂದ ಗಣೇಶ್ ಕೇರ ಅವರು ಆತಂಕಕ್ಕೊಳಗಾಗಿದ್ದರು.
ನಾಯಿಯನ್ನು ಪತ್ತೆಹಚ್ಚಲು ಅವರು ಸಾಮಾಜಿಕ ಜಾಲತಾಣಗಳು ಹಾಗೂ ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದರು. ಅಲ್ಲದೆ, ನಾಯಿಯ ಸುಳಿವು ನೀಡಿದವರಿಗೆ ಅಥವಾ ಹುಡುಕಿಕೊಟ್ಟವರಿಗೆ 50,000 ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದರು. ನಗರದ ವಿವಿಧ ಭಾಗಗಳಲ್ಲಿ ಬ್ಯಾನರ್ಗಳನ್ನೂ ಅಳವಡಿಸಲಾಗಿತ್ತು.

ಇದೀಗ ಗಣೇಶ್ ಅವರ ಪ್ರಯತ್ನಕ್ಕೆ ಫಲ ಸಿಕ್ಕಿದ್ದು, ಪೋಳ್ಯ ಪರಿಸರದವರೇ ಆದ ಪುರಂದರ ಎಂಬವರು ನಾಪತ್ತೆಯಾಗಿದ್ದ ಚಿನ್ನು ನಾಯಿಯನ್ನು ಪತ್ತೆಹಚ್ಚಿ ನೀಡಿದ್ದಾರೆ. ಕೊಟ್ಟ ಮಾತಿನಂತೆ ಗಣೇಶ್ ಕೇರ ಅವರು ಪುರಂದರ ಅವರನ್ನು ಮನೆಗೆ ಕರೆಸಿ 50,000 ರೂಪಾಯಿಗಳ ಚೆಕ್ ನೀಡಿ ಗೌರವಿಸಿದ್ದಾರೆ.
ಶ್ವಾನಪ್ರಿಯರ ಈ ಕಥೆ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಪ್ರಾಣಿಗಳ ಮೇಲಿನ ಪ್ರೀತಿ ಮತ್ತು ಬದ್ಧತೆಯ ಉದಾಹರಣೆಯಾಗಿ ಗಮನ ಸೆಳೆಯುತ್ತಿದೆ.
ಮತ್ತಷ್ಟು ಓದಿ :
ಪುತ್ತೂರಿನಲ್ಲಿ ಅಕ್ರಮ ಮರಳುಗಾರಿಕೆಗೆ ಪೊಲೀಸರ ದಾಳಿ; ಪ್ರಕರಣ ದಾಖಲು
ಮಂಗಳೂರು ಎಕ್ಕೂರಿನಲ್ಲಿ ಭೀಕರ ರಸ್ತೆ ಅಪಘಾತ : ಲಾರಿಗೆ ಬೈಕ್ ಡಿಕ್ಕಿ, 26 ವರ್ಷದ ಎಸಿ ಮೆಕ್ಯಾನಿಕ್ ಸಾವು











3 thoughts on “ನಾಪತ್ತೆಯಾಗಿದ್ದ ಚಿನ್ನು ನಾಯಿ ಪತ್ತೆ : ₹50 ಸಾವಿರ ಬಹುಮಾನ”