ಪುತ್ತೂರು: ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಆರ್ಯಾಪು ಗ್ರಾಮದ ಮರಕ್ಕ ಸಮೀಪ ಪೊಲೀಸರು ನಡೆಸಿದ ವಾಹನ ತಪಾಸಣೆಯಲ್ಲಿ ಹಸುವನ್ನು ನಿಯಮ ಉಲ್ಲಂಘಿಸಿ ಸಾಗಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ಪೊಲೀಸ್ ಉಪನಿರೀಕ್ಷಕಿ ಸುಷ್ಮಾ ಜಿ. ಭಂಡಾರಿ ಅವರ ನೇತೃತ್ವದ ತಂಡ ನಿಯಮಿತ ಗಸ್ತಿನಲ್ಲಿದ್ದ ವೇಳೆ ದೊರೆತ ಖಚಿತ ಮಾಹಿತಿಯ ಆಧಾರದಲ್ಲಿ ಪಿಕಪ್ ವಾಹನವನ್ನು ತಡೆದು ಪರಿಶೀಲಿಸಿತು. ಈ ವೇಳೆ ವಾಹನದಲ್ಲಿ ಹಸುವನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಿಸಲಾಗುತ್ತಿರುವುದು ಪತ್ತೆಯಾಯಿತು.
ಪರಿಶೀಲನೆ ವೇಳೆ ಜಾನುವಾರು ಸಾಗಾಟಕ್ಕೆ ಕಡ್ಡಾಯವಾಗಿರುವ ಪರವಾನಿಗೆ ಹಾಗೂ ಪಶುವೈದ್ಯಾಧಿಕಾರಿಯಿಂದ ನೀಡಬೇಕಾದ ಪ್ರಮಾಣಪತ್ರವನ್ನು ವಾಹನದಲ್ಲಿದ್ದವರು ಸಲ್ಲಿಸಲು ವಿಫಲರಾದರು. ಈ ಹಿನ್ನೆಲೆಯಲ್ಲಿ ಮೊಯ್ದುಕುಂಞ, ನಾರಾಯಣ ಹಾಗೂ ಮೇಗಿನಪಂಜದ ಬಾಲಕೃಷ್ಣ ವಿರುದ್ಧ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪುತ್ತೂರು ಗ್ರಾಮಾಂತರ ಪೊಲೀಸರು ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.
ಮತ್ತಷ್ಟು ಓದಿ :
ಪುತ್ತೂರಿನಲ್ಲಿ DHL Blue Dart ಸಂಸ್ಥೆಯಲ್ಲಿ ಉದ್ಯೋಗಾವಕಾಶ















