---Advertisement---

ಆಲಂಕಾರು ದುರಂತ : ತಂದೆ-ತಾಯಿಯನ್ನು ಕಳೆದುಕೊಂಡ ಎರಡು ವರ್ಷದ ಧೃವಿ; ‘ಅಮ್ಮ ಎಲ್ಲಿದ್ದಾಳೆ?’ ಎಂಬ ಪ್ರಶ್ನೆಗೆ ಉತ್ತರವೇ ಇಲ್ಲ!

drusti news logo
On: June 23, 2026
Alankaru Tragedy Dhruvi Seeks Her Mother
---Advertisement---

ಆಲಂಕಾರು, ಜೂನ್ 22 : ಆಲಂಕಾರು ಪೇಟೆಯಲ್ಲಿ ಬೆಳಕಿಗೆ ಬಂದ ದಂಪತಿ ಸಾವಿನ ದುರಂತದ ಹಿಂದೆ ಉಳಿದಿರುವುದು ಕಣ್ಣೀರಿನ ಕಥೆ. ಬಜಗೋಳಿ ಮೂಲದ ದಿನೇಶ್ ಪೂಜಾರಿ ಹಾಗೂ ಅವರ ಪತ್ನಿ ಸಂಗೀತಾ ಸಾವಿನ ಬಳಿಕ, ಕೇವಲ ಎರಡು ವರ್ಷದ ಮಗಳು ಧೃವಿ ಅನಾಥಳಾಗಿದ್ದು, ಸದ್ಯ ತಾಯಿಯ ಮನೆಯವರ ಆರೈಕೆಯಲ್ಲಿದ್ದಾಳೆ.

ಕಳೆದ ಒಂದು ವರ್ಷದಿಂದ ಆಲಂಕಾರು ಪೇಟೆಯಲ್ಲಿ ಹೋಟೆಲ್ ನಡೆಸುತ್ತಿದ್ದ ಈ ದಂಪತಿಯ ಸಾವಿನ ಸುದ್ದಿ ಇಡೀ ಪ್ರದೇಶವನ್ನೇ ಬೆಚ್ಚಿಬೀಳಿಸಿದೆ. ಆದರೆ ಈ ಘಟನೆಯ ಅತ್ಯಂತ ನೋವಿನ ಮುಖ ಎಂದರೆ, ತನ್ನ ತಂದೆ-ತಾಯಿಯನ್ನು ಕಳೆದುಕೊಂಡಿರುವ ಪುಟ್ಟ ಮಗುವಿನ ಸ್ಥಿತಿ.

ಶನಿವಾರ ಮಧ್ಯಾಹ್ನ ಘಟನೆ ಬೆಳಕಿಗೆ ಬಂದ ಬಳಿಕ ಸಂಬಂಧಿಕರು ಸ್ಥಳಕ್ಕೆ ಆಗಮಿಸುವಲ್ಲಿ ತಡವಾದ ಕಾರಣ, ಪೊಲೀಸ್ ಇಲಾಖೆಯ ಮಹಜರು ಹಾಗೂ ಇತರೆ ಕಾನೂನು ಪ್ರಕ್ರಿಯೆಗಳು ರಾತ್ರಿ ತಡವರೆಗೂ ಮುಂದುವರಿದವು. ನಂತರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿತ್ತು.

ರವಿವಾರ ಮಧ್ಯಾಹ್ನ ಮರಣೋತ್ತರ ಪರೀಕ್ಷೆ ಪೂರ್ಣಗೊಂಡ ಬಳಿಕ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಕುಟುಂಬದವರ ಇಚ್ಛೆಯಂತೆ ದಿನೇಶ್ ಮತ್ತು ಸಂಗೀತಾ ಅವರ ಅಂತ್ಯಸಂಸ್ಕಾರವನ್ನು ಸಂಗೀತಾ ಅವರ ತವರು ಊರಾದ ಸಿದ್ದಕಟ್ಟೆಯಲ್ಲಿ ನೆರವೇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಯಿ ಮಡಿಲಲ್ಲಿ ಬೆಳೆದಿದ್ದ ಪುಟ್ಟ ಧೃವಿಗೆ ಕಳೆದ ಎರಡು ದಿನಗಳಿಂದ ತಾಯಿಯ ಮುದ್ದು, ಆರೈಕೆ ಸಿಗದೇ ಇರುವುದರಿಂದ ಆಕೆ ಅಸ್ವಸ್ಥಳಾಗಿ ಕಾಣಿಸುತ್ತಿದ್ದಾಳೆ ಎಂದು ಕುಟುಂಬಸ್ಥರು ಹೇಳುತ್ತಾರೆ.

ಅಜ್ಜಿಯ ಬಳಿ ಇರುವ ಮಗು ಆಗಾಗ ತಾಯಿಯನ್ನು ಹುಡುಕುತ್ತಿದ್ದು, “ಅಮ್ಮ ಎಲ್ಲಿದ್ದಾರೆ?” ಎಂಬ ಪ್ರಶ್ನೆಯೊಂದಿಗೆ ಅಳುತ್ತಿರುವ ದೃಶ್ಯ ಕುಟುಂಬದವರ ಮನಸ್ಸನ್ನು ಕಲಕುತ್ತಿದೆ. ಘಟನೆಯ ಗಂಭೀರತೆಯನ್ನು ಅರಿಯದ ಆಕೆಯ ಮುಗ್ಧತನ ಎಲ್ಲರ ಕಣ್ಣಲ್ಲೂ ನೀರು ತರಿಸುತ್ತಿದೆ.

ಸಂಗೀತಾ ಅವರ ಸಂಬಂಧಿ ಸುಮಲತಾ ಮಾತನಾಡಿ, ಸಂಗೀತಾ ಹಲವು ವರ್ಷಗಳಿಂದ ವೈವಾಹಿಕ ಜೀವನದ ಸಮಸ್ಯೆಗಳನ್ನು ಎದುರಿಸಿದ್ದರೂ ಕುಟುಂಬವನ್ನು ತೊರೆದು ಹೋಗುವ ಸ್ವಭಾವದವರಲ್ಲ ಎಂದು ತಿಳಿಸಿದ್ದಾರೆ.

ಸಾವಿನ ಹಿಂದೆ ಅನುಮಾನಾಸ್ಪದ ಅಂಶಗಳಿವೆ ಎಂದು ಆರೋಪಿಸಿರುವ ಅವರು, ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ ಸತ್ಯ ಹೊರಬರಬೇಕೆಂದು ಆಗ್ರಹಿಸಿದ್ದಾರೆ.

ಆಲಂಕಾರಿನಲ್ಲಿ ನಡೆದ ಈ ದುರಂತ ಪ್ರಕರಣದ ತನಿಖೆ ಮುಂದುವರಿದಿದ್ದು, ನಿಖರ ಸತ್ಯಾಂಶ ಬಹಿರಂಗವಾಗುವ ನಿರೀಕ್ಷೆಯಿದೆ. ಆದರೆ ಸದ್ಯಕ್ಕೆ ತಂದೆ-ತಾಯಿಯನ್ನು ಕಳೆದುಕೊಂಡ ಪುಟ್ಟ ಧೃವಿಯ ಭವಿಷ್ಯವೇ ಕುಟುಂಬಸ್ಥರು ಹಾಗೂ ಸಾರ್ವಜನಿಕರ ದೊಡ್ಡ ಚಿಂತೆಯ ವಿಷಯವಾಗಿದೆ.


ಮತ್ತಷ್ಟು ಓದಿ :

ಆಲಂಕಾರಿನಲ್ಲಿ ನಿಗೂಢ ದುರಂತ : ಬಾಡಿಗೆ ಮನೆಯಲ್ಲಿ ದಂಪತಿ ಶವವಾಗಿ ಪತ್ತೆ

ನಾಪತ್ತೆಯಾಗಿದ್ದ ಚಿನ್ನು ನಾಯಿ ಪತ್ತೆ : ₹50 ಸಾವಿರ ಬಹುಮಾನ

ಪುತ್ತೂರಿನಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ : ಜೂನ್ 18ರಿಂದ ಭಾರೀ ವಾಹನಗಳಿಗೆ ಪ್ರವೇಶ ನಿರ್ಬಂಧ

drusti news logo

drustinews

Drusti News delivers timely, accurate, and reliable Kannada news covering local, state, national, and global events

Join WhatsApp

Join Now

Join Instagram

Join Now

Leave a Comment