ಭಕ್ತರ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡ ಕಳ್ಳರ ಹೊಸ ತಂತ್ರಕ್ಕೆ ಬೆಚ್ಚಿಬಿದ್ದ ಧರ್ಮಸ್ಥಳ
ಧರ್ಮಸ್ಥಳದಲ್ಲಿ ಭಕ್ತರ ಸುರಕ್ಷತೆ ಬಗ್ಗೆ ಪ್ರಶ್ನೆ ಎಬ್ಬಿಸುವಂತಹ ಘಟನೆೊಂದು ನಡೆದಿದ್ದು, ವಯೋವೃದ್ಧ ಮಹಿಳೆಯೊಬ್ಬರು ಅಪರಿಚಿತರ ಮಾತಿಗೆ ನಂಬಿಕೆ ಇಟ್ಟು ಸಂಕಷ್ಟಕ್ಕೆ ಸಿಲುಕಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ. ದೇವರ ದರ್ಶನ ಮುಗಿಸಿ ಬೆಂಗಳೂರಿಗೆ ಮರಳಲು ಬಸ್ ಕಾಯುತ್ತಿದ್ದ ಮಹಿಳೆಗೆ ಅಪರಿಚಿತ ವ್ಯಕ್ತಿಯೊಬ್ಬ ಜ್ಯೂಸ್ ಹಾಗೂ ಪ್ರಸಾದ ನೀಡಿದ ಬಳಿಕ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಮತ್ತು ನಗದು ಕಳುವಾಗಿರುವ ಆರೋಪ ಕೇಳಿಬಂದಿದೆ.
ಬೆಂಗಳೂರಿನ ಬನ್ನೇರುಘಟ್ಟ ರಸ್ತೆ ನಿವಾಸಿ ಶ್ರೀಮತಿ ಪ್ರೇಮಾ ಕೆ (70) ಅವರು ಮೇ 25ರಂದು ಧರ್ಮಸ್ಥಳಕ್ಕೆ ಭೇಟಿ ನೀಡಿದ್ದರು. ದೇವಸ್ಥಾನದಲ್ಲಿ ಪೂಜೆ ಹಾಗೂ ದರ್ಶನ ಮುಗಿಸಿಕೊಂಡ ಬಳಿಕ ರಾತ್ರಿ ಬೆಂಗಳೂರಿಗೆ ಹಿಂತಿರುಗಲು ದೇವಸ್ಥಾನದ ಮುಖ್ಯದ್ವಾರದ ಎದುರಿನ ಬಸ್ ನಿಲ್ದಾಣದಲ್ಲಿ ಕುಳಿತಿದ್ದರು ಎಂದು ತಿಳಿದುಬಂದಿದೆ.
ಈ ಸಂದರ್ಭದಲ್ಲೇ ಅವರ ಬಳಿ ಬಂದ ವ್ಯಕ್ತಿಯೊಬ್ಬ ಮೊದಲು ಸಾಮಾನ್ಯ ಮಾತುಕತೆ ಆರಂಭಿಸಿದ್ದಾನೆ. ಕೆಲ ಹೊತ್ತಿನಲ್ಲೇ ಆತ ಆತ್ಮೀಯತೆ ಬೆಳೆಸಿಕೊಂಡು ದೇವರ ಪ್ರಸಾದ ಎಂದು ಹೇಳಿ ತಿಂಡಿ ನೀಡಿದ್ದಲ್ಲದೆ ಕುಡಿಯಲು ಜ್ಯೂಸ್ ಕೂಡ ಕೊಟ್ಟಿದ್ದಾನೆ ಎನ್ನಲಾಗಿದೆ. ಭಕ್ತಿಭಾವದ ವಾತಾವರಣದಲ್ಲಿದ್ದ ಕಾರಣ ಯಾವುದೇ ಅನುಮಾನಪಡದ ಪ್ರೇಮಾ ಅವರು ಅದನ್ನು ಸ್ವೀಕರಿಸಿದ್ದಾರೆ.
ಜ್ಯೂಸ್ ಸೇವಿಸಿದ ಬಳಿಕ ಮಹಿಳೆಗೆ ತಲೆಸುತ್ತು ಹಾಗೂ ಅಸ್ವಸ್ಥತೆ ಕಾಣಿಸಿಕೊಂಡಿದ್ದು, ಬಳಿಕ ಅವರ ಬಳಿಯಿದ್ದ ಚಿನ್ನಾಭರಣ ಮತ್ತು ನಗದು ಕಾಣೆಯಾಗಿರುವುದು ಗೊತ್ತಾಗಿದೆ. ಕಳುವಾದ ಚಿನ್ನ ಹಾಗೂ ಹಣದ ಒಟ್ಟು ಮೌಲ್ಯ ಸುಮಾರು 10 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.
ಘಟನೆ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಮತ್ತು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪರಿಚಿತ ವ್ಯಕ್ತಿಯ ಚಲನವಲನಗಳ ಕುರಿತು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ಮುಂದುವರಿದಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಪರಿಚಿತರಿಂದ ಆಹಾರ ಅಥವಾ ಪಾನೀಯ ಸ್ವೀಕರಿಸುವಾಗ ಹೆಚ್ಚು ಎಚ್ಚರಿಕೆಯಿಂದಿರಬೇಕು ಎಂದು ಪೊಲೀಸರು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.
ಈ ಘಟನೆ ಧರ್ಮಸ್ಥಳಕ್ಕೆ ಬರುವ ಭಕ್ತರಲ್ಲಿ ಆತಂಕ ಮೂಡಿಸಿದ್ದು, ಭಕ್ತರ ಸುರಕ್ಷತೆಯ ಕುರಿತ ಚರ್ಚೆಗೂ ಕಾರಣವಾಗಿದೆ.









