---Advertisement---

ಗಡಾಯಿಕಲ್ಲು ಚಾರಣ ಪುನರಾರಂಭ : ಆನ್‌ಲೈನ್ ನೋಂದಣಿ ಕಡ್ಡಾಯ, ದಿನಕ್ಕೆ 500 ಮಂದಿಗೆ ಮಾತ್ರ ಅವಕಾಶ

drusti news logo
On: June 25, 2026
Gadayikallu Trek Reopens Entry
---Advertisement---

ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ಜನಪ್ರಿಯ ಚಾರಣ ತಾಣಗಳಲ್ಲೊಂದಾದ ಗಡಾಯಿಕಲ್ಲು  ಚಾರಣಕ್ಕೆ ಅರಣ್ಯ ಇಲಾಖೆ ಮತ್ತೆ ಅವಕಾಶ ಕಲ್ಪಿಸಿದೆ. ಆದರೆ ಚಾರಣ ಚಟುವಟಿಕೆಗಳನ್ನು ನಿಯಂತ್ರಿತ ರೀತಿಯಲ್ಲಿ ನಡೆಸುವ ಉದ್ದೇಶದಿಂದ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತಂದಿದ್ದು, ಪ್ರವೇಶಕ್ಕೆ ಆನ್‌ಲೈನ್ ನೋಂದಣಿ ಕಡ್ಡಾಯಗೊಳಿಸಲಾಗಿದೆ.

ಗಡಾಯಿಕಲ್ಲು ಚಾರಣಕ್ಕೆ ತೆರಳುವವರು ಕರ್ನಾಟಕ ಅರಣ್ಯ ಇಲಾಖೆಯ ‘ಅರಣ್ಯ ವಿಹಾರ’ ಪೋರ್ಟಲ್ ಅಥವಾ ಮೊಬೈಲ್ ಆ್ಯಪ್ ಮೂಲಕ ಮುಂಗಡವಾಗಿ ಟಿಕೆಟ್ ಕಾಯ್ದಿರಿಸಬೇಕು. ಸ್ಥಳದಲ್ಲೇ ಟಿಕೆಟ್ ವಿತರಣೆ ವ್ಯವಸ್ಥೆ ಇರುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಆನ್‌ಲೈನ್ ನೋಂದಣಿ ಮಾಡದವರಿಗೆ ಪ್ರವೇಶ ನಿರಾಕರಿಸಲಾಗುತ್ತದೆ.

ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 1 ರ ತನಕ ಪ್ರವೇಶವಿದೆ ಹಾಗೆಯೇ ಸಂಜೆ 4 ರಿಂದ 5 ಗಂಟೆಯ ಒಳಗೆ ಹಿಂದುರುಗಿ ಬರಬೇಕಿದೆ. ಚಾರಣ ತಾಣದಲ್ಲಿ ಅತಿಯಾದ ಜನಸಂದಣಿ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪ್ರತಿದಿನ ಗರಿಷ್ಠ 500 ಮಂದಿಗೆ ಮಾತ್ರ ಪ್ರವೇಶ ಕಲ್ಪಿಸಲಾಗುತ್ತಿದೆ. ನಿಗದಿತ ಸಂಖ್ಯೆಯ ಟಿಕೆಟ್‌ಗಳು ಪೂರ್ಣಗೊಂಡ ಬಳಿಕ ಆ ದಿನದ ನೋಂದಣಿ ಪ್ರಕ್ರಿಯೆ ಸ್ವಯಂಚಾಲಿತವಾಗಿ ಮುಕ್ತಾಯಗೊಳ್ಳಲಿದೆ.

ಟಿಕೆಟ್ ಕಾಯ್ದಿರಿಸುವ ಸಂದರ್ಭದಲ್ಲಿ ಸರ್ಕಾರದಿಂದ ಮಾನ್ಯತೆ ಪಡೆದ ಗುರುತಿನ ಚೀಟಿಯ ವಿವರಗಳನ್ನು ದಾಖಲಿಸಬೇಕಾಗುತ್ತದೆ. ಚಾರಣದ ದಿನ ಅದೇ ಮೂಲ ಗುರುತಿನ ಚೀಟಿಯನ್ನು ಪರಿಶೀಲನೆಗಾಗಿ ಜೊತೆಯಲ್ಲಿ ಹೊಂದಿರಬೇಕು ಎಂದು ಸೂಚಿಸಲಾಗಿದೆ.

ಚಾರಣಕ್ಕೆ ಸಂಬಂಧಿಸಿದ ಪ್ರವೇಶ ಶುಲ್ಕವಾದ 50 ರೂಪಾಯಿಯನ್ನು ಬುಕ್ಕಿಂಗ್ ಪ್ರಕ್ರಿಯೆಯ ವೇಳೆ ಡಿಜಿಟಲ್ ವಿಧಾನದಲ್ಲೇ ಪಾವತಿಸಬೇಕಿದೆ. ನೋಂದಣಿ ಪೂರ್ಣಗೊಂಡ ಬಳಿಕವೇ ಪ್ರವೇಶಕ್ಕೆ ಅನುಮತಿ ದೊರೆಯಲಿದೆ.

ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿರುವ ಈ ಅರಣ್ಯ ಪ್ರದೇಶವು ಸೂಕ್ಷ್ಮ ಪರಿಸರ ವ್ಯವಸ್ಥೆಯನ್ನು ಹೊಂದಿರುವುದರಿಂದ ಜನಸಂದಣಿ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಆದ್ಯತೆ ನೀಡಿದೆ. ತ್ಯಾಜ್ಯ ನಿರ್ವಹಣೆ, ಅರಣ್ಯದ ಸ್ವಚ್ಛತೆ ಮತ್ತು ವನ್ಯಜೀವಿಗಳ ಸಂರಕ್ಷಣೆ ದೃಷ್ಟಿಯಿಂದ ನಿಯಂತ್ರಿತ ಪ್ರವೇಶ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ.

ಗಡಾಯಿಕಲ್ಲು ಚಾರಣವು ಕಡಿದಾದ ಮೆಟ್ಟಿಲುಗಳು ಮತ್ತು ಏರುಗಾಡುಗಳನ್ನು ಒಳಗೊಂಡಿರುವುದರಿಂದ ಪ್ರವಾಸಿಗರು ತಮ್ಮ ಭೇಟಿ ದಿನಾಂಕವನ್ನು ಮುಂಚಿತವಾಗಿ ಯೋಜಿಸಿ ಟಿಕೆಟ್ ಲಭ್ಯತೆ ಪರಿಶೀಲಿಸುವಂತೆ ಸೂಚಿಸಲಾಗಿದೆ. ಅಲ್ಲದೆ, ಪ್ಲಾಸ್ಟಿಕ್ ಸೇರಿದಂತೆ ಯಾವುದೇ ತ್ಯಾಜ್ಯವನ್ನು ಅರಣ್ಯ ಪ್ರದೇಶದಲ್ಲಿ ಬಿಸಾಡದೆ ಪರಿಸರ ಸಂರಕ್ಷಣೆಗೆ ಸಹಕರಿಸುವಂತೆ ಇಲಾಖೆ ಮನವಿ ಮಾಡಿದೆ.

ಗಡಾಯಿಕಲ್ಲು ಚಾರಣ ಪುನರಾರಂಭವಾಗಿರುವುದು ಪ್ರಕೃತಿ ಪ್ರಿಯರು ಹಾಗೂ ಸಾಹಸ ಚಾರಣಿಗರಿಗೆ ಸಂತಸದ ವಿಚಾರವಾಗಿದೆ. ಆದರೆ ಹೊಸ ನಿಯಮಾವಳಿಗಳ ಅನುಸರಣೆ ಕಡ್ಡಾಯವಾಗಿದ್ದು, ಪರಿಸರ ಸಂರಕ್ಷಣೆ ಮತ್ತು ಸುರಕ್ಷತೆಯ ಉದ್ದೇಶದಿಂದ ಅರಣ್ಯ ಇಲಾಖೆ ಜಾರಿಗೊಳಿಸಿರುವ ಕ್ರಮಗಳಿಗೆ ಸಹಕಾರ ನೀಡುವಂತೆ ಮನವಿ ಮಾಡಲಾಗಿದೆ.


ಮತ್ತಷ್ಟು ಓದಿ :

ಬೆಳಾಲು ಸ್ಕೂಟಿ ಬೆಂಕಿ ಅವಘಡ : 12 ದಿನಗಳ ಜೀವದ ಹೋರಾಟದ ಬಳಿಕ ಬಾಲಕ ದಿಯಾನ್‌ ಮೃತ್ಯು

ಬೆಳ್ತಂಗಡಿ : ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಇಬ್ಬರು ಬಾಲಕರ ವಿರುದ್ಧ ಪೋಕ್ಸೋ ಪ್ರಕರಣ

ಗಡಾಯಿಕಲ್ಲು ಚಾರಣಕ್ಕೆ ಮತ್ತೆ ಬ್ರೇಕ್: ಜೂನ್ 14ರಿಂದ ನಿಷೇಧ

drusti news logo

drustinews

Drusti News delivers timely, accurate, and reliable Kannada news covering local, state, national, and global events

Join WhatsApp

Join Now

Join Instagram

Join Now

2 thoughts on “ಗಡಾಯಿಕಲ್ಲು ಚಾರಣ ಪುನರಾರಂಭ : ಆನ್‌ಲೈನ್ ನೋಂದಣಿ ಕಡ್ಡಾಯ, ದಿನಕ್ಕೆ 500 ಮಂದಿಗೆ ಮಾತ್ರ ಅವಕಾಶ”

Leave a Comment