ಸಕಲೇಶಪುರ: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ನಿರಂತರ ಮಳೆಯ ಪರಿಣಾಮ, ಯಡಕುಮರಿ–ಶಿರಿಬಾಗಿಲು ರೈಲು ನಿಲ್ದಾಣಗಳ ನಡುವಿನ ಅರೆಬೆಟ್ಟ ಸಮೀಪ ಭಾರಿ ಭೂಕುಸಿತ ಸಂಭವಿಸಿದೆ. ರೈಲು ಹಳಿಯ ಮೇಲೆ ಅಪಾರ ಪ್ರಮಾಣದ ಮಣ್ಣು ಹಾಗೂ ಬೃಹತ್ ಬಂಡೆಗಳು ಕುಸಿದು ಬಿದ್ದಿರುವುದರಿಂದ ಬೆಂಗಳೂರು–ಮಂಗಳೂರು ಸೇರಿದಂತೆ ಕರಾವಳಿ ಭಾಗಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರೈಲು ಮಾರ್ಗದಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ನೈಋತ್ಯ ರೈಲ್ವೆ ಹಲವು ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಿದ್ದು, ಕೆಲವು ರೈಲುಗಳನ್ನು ಮಧ್ಯಂತರ ನಿಲ್ದಾಣಗಳಲ್ಲೇ ಸ್ಥಗಿತಗೊಳಿಸಿದೆ. ಇದರಿಂದ ನೂರಾರು ಪ್ರಯಾಣಿಕರು ವಿವಿಧ ರೈಲು ನಿಲ್ದಾಣಗಳಲ್ಲಿ ಸಿಲುಕಿಕೊಂಡು ಪರದಾಡುವಂತಾಗಿದೆ.
ಈ ರೈಲುಗಳ ಸಂಚಾರದಲ್ಲಿ ಬದಲಾವಣೆ
ಭೂಕುಸಿತದ ಹಿನ್ನೆಲೆಯಲ್ಲಿ ಕೆಳಕಂಡ ರೈಲುಗಳ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ:
- 16585 ಬೆಂಗಳೂರು–ಮುರುಡೇಶ್ವರ ಎಕ್ಸ್ಪ್ರೆಸ್ – ಹಾಸನದವರೆಗೆ ಮಾತ್ರ ಸಂಚಾರ; ಹಾಸನ–ಮುರುಡೇಶ್ವರ ಮಾರ್ಗ ರದ್ದು.
- 16511 KSR ಬೆಂಗಳೂರು–ಕೊಝಿಕೋಡ್ ಎಕ್ಸ್ಪ್ರೆಸ್ – ಹಾಸನದಲ್ಲೇ ಪ್ರಯಾಣ ಅಂತ್ಯ; ಮುಂದಿನ ಸೇವೆ ಸ್ಥಗಿತ.
- 17377 ವಿಜಯಪುರ–ಮಂಗಳೂರು ಸೆಂಟ್ರಲ್ ಎಕ್ಸ್ಪ್ರೆಸ್ – ಹಾಸನದವರೆಗೆ ಮಾತ್ರ ಸಂಚಾರ.
- 16595 KSR ಬೆಂಗಳೂರು–ಕಾರವಾರ ಎಕ್ಸ್ಪ್ರೆಸ್ – ಸಕಲೇಶಪುರದಲ್ಲೇ ಪ್ರಯಾಣ ಅಂತ್ಯ; ಸಕಲೇಶಪುರ–ಕಾರವಾರ ಸೇವೆ ರದ್ದು.
ಹಿಂತಿರುಗುವ ರೈಲುಗಳಲ್ಲೂ ಬದಲಾವಣೆ ಮಾಡಲಾಗಿದೆ.
- 16586 ಮುರುಡೇಶ್ವರ–SMVT ಬೆಂಗಳೂರು ಎಕ್ಸ್ಪ್ರೆಸ್ – ಸುಬ್ರಹ್ಮಣ್ಯ ರಸ್ತೆ ನಿಲ್ದಾಣದಲ್ಲೇ ಪ್ರಯಾಣ ಅಂತ್ಯ.
- 16512 ಕೊಝಿಕೋಡ್–KSR ಬೆಂಗಳೂರು ಎಕ್ಸ್ಪ್ರೆಸ್ – ಕಬಕ–ಪುಟ್ಟೂರುವರೆಗೆ ಮಾತ್ರ ಸಂಚಾರ; ಅಲ್ಲಿಂದ ಬೆಂಗಳೂರು ಮಾರ್ಗದ ಸೇವೆ ರದ್ದು.
ಮಳೆ ನಡುವೆ ಹಳಿ ತೆರವು ಕಾರ್ಯಾಚರಣೆ
ಭೂಕುಸಿತ ಸಂಭವಿಸಿದ ಪ್ರದೇಶದಲ್ಲಿ ನಿರಂತರ ಮಳೆ ಸುರಿಯುತ್ತಿರುವುದರಿಂದ ಹಳಿಯ ಮೇಲಿನ ಮಣ್ಣು ಮತ್ತು ಬಂಡೆಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ. ರೈಲ್ವೆ ಸಿಬ್ಬಂದಿ ಯಂತ್ರೋಪಕರಣಗಳ ಸಹಾಯದಿಂದ ಕಾರ್ಯಾಚರಣೆ ನಡೆಸುತ್ತಿದ್ದು, ಸಂಚಾರ ಪುನರಾರಂಭಕ್ಕೆ ಪ್ರಯತ್ನ ಮುಂದುವರಿದಿದೆ.
ರೈಲು ಪ್ರಯಾಣಿಕರು ಹೊರಡುವ ಮೊದಲು ತಮ್ಮ ರೈಲಿನ ಸಂಚಾರ ಸ್ಥಿತಿಯನ್ನು ಪರಿಶೀಲಿಸಿ ಪ್ರಯಾಣಿಸುವಂತೆ ನೈಋತ್ಯ ರೈಲ್ವೆ ಮನವಿ ಮಾಡಿದೆ.
ಮತ್ತಷ್ಟು ಓದಿ :
ಫೇಸ್ಬುಕ್ ಜಾಹೀರಾತು ನಂಬಿ ₹16.20 ಲಕ್ಷ ಕಳೆದುಕೊಂಡ ಮಹಿಳೆ! ಟೆಲಿಗ್ರಾಂ ಮೂಲಕ ಹೂಡಿಕೆ ಹೆಸರಿನಲ್ಲಿ ಭಾರಿ ವಂಚನೆ










