ಉರುಳಿಗೆ ಸಿಲುಕಿ ಗಾಯಗೊಂಡಿರುವ ಹುಲಿ ನಾಲ್ಕೈದು ದಿನಗಳಿಂದ ಅರಣ್ಯ ಪ್ರದೇಶದಲ್ಲಿ ಓಡಾಟ
ಚಿಕ್ಕಮಗಳೂರು: ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣವಾದ ಮುಳ್ಳಯ್ಯನಗಿರಿ ತಪ್ಪಲು ಪ್ರದೇಶದಲ್ಲಿ ಉರುಳಿಗೆ ಸಿಲುಕಿ ಗಾಯಗೊಂಡಿರುವ ಹುಲಿಯ ಸಂಚಾರ ಆತಂಕಕ್ಕೆ ಕಾರಣವಾಗಿದೆ. ಕಳೆದ ಕೆಲವು ದಿನಗಳಿಂದ ಈ ಹುಲಿ ಅರಣ್ಯ ಪ್ರದೇಶದ ಸುತ್ತಮುತ್ತ ಓಡಾಡುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸಿಗರು, ತೋಟದ ಕಾರ್ಮಿಕರು ಹಾಗೂ ಗ್ರಾಮಸ್ಥರು ಹೆಚ್ಚಿನ ಎಚ್ಚರಿಕೆಯಿಂದ ಇರಬೇಕೆಂದು ಅರಣ್ಯ ಇಲಾಖೆ ಸೂಚಿಸಿದೆ.
ಮಾಹಿತಿಯ ಪ್ರಕಾರ, ಹುಲಿಯ ಸೊಂಟದ ಭಾಗದಲ್ಲಿ ಉರುಳು ಇನ್ನೂ ನೇತಾಡುತ್ತಿದ್ದು, ಅದರ ಪರಿಣಾಮವಾಗಿ ಪ್ರಾಣಿ ತೀವ್ರ ನೋವಿನಿಂದ ಬಳಲುತ್ತಿದೆ. ಗಾಯಗೊಂಡಿದ್ದರೂ ಸಹ ಹುಲಿ ತನ್ನ ಬೇಟೆಯಾಡುವ ಸ್ವಭಾವವನ್ನು ಮುಂದುವರಿಸಿದ್ದು, ಜಿಂಕೆ ಹಾಗೂ ಕಡವೆಗಳನ್ನು ಬೇಟೆಯಾಡಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಅರಣ್ಯ ಪ್ರದೇಶದ ವಿವಿಧ ಭಾಗಗಳಲ್ಲಿ ಪ್ರಾಣಿಗಳ ಅವಶೇಷಗಳು ಪತ್ತೆಯಾಗಿರುವುದರಿಂದ ಹುಲಿ ಸಕ್ರಿಯವಾಗಿರುವುದು ದೃಢಪಟ್ಟಿದೆ. ಇದನ್ನು ಓದಿ : ಭಟ್ಕಳದಲ್ಲಿ ಬಾವಿಗೆ ಬಿದ್ದ ಚಿರತೆಗೆ ಜೀವದಾನ : ಅರಣ್ಯಇಲಾಖೆಯ ಯಶಸ್ವಿ ರಕ್ಷಣಾ ಕಾರ್ಯಾಚರಣೆ
ಸೆರೆಗಾಗಿ ಅರಣ್ಯ ಇಲಾಖೆಯ ಹರಸಾಹಸ
ಗಾಯಗೊಂಡ ಹುಲಿಯನ್ನು ಸುರಕ್ಷಿತವಾಗಿ ಸೆರೆಹಿಡಿಯಲು ಅರಣ್ಯ ಇಲಾಖೆ ಕಳೆದ ಮೂರುರಿಂದ ನಾಲ್ಕು ದಿನಗಳಿಂದ ನಿರಂತರ ಕಾರ್ಯಾಚರಣೆ ನಡೆಸುತ್ತಿದೆ. ಹುಲಿಯ ಚಲನವಲನಗಳನ್ನು ನಿಖರವಾಗಿ ಪತ್ತೆಹಚ್ಚಲು ವಿವಿಧ ಸ್ಥಳಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಅದರ ಓಡಾಟದ ಮೇಲೆ ನಿಗಾ ಇಡಲಾಗಿದೆ.
ಹುಲಿಯ ಅಪ್ರತೀಕ್ಷಿತ ದಾಳಿಯ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು, ತೋಟದ ಕಾರ್ಮಿಕರು ತಾತ್ಕಾಲಿಕವಾಗಿ ಕೆಲಸಕ್ಕೆ ತೆರಳದಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಇದರಿಂದ ಸ್ಥಳೀಯರಲ್ಲೂ ಆತಂಕ ಹೆಚ್ಚಾಗಿದೆ.
ಗ್ರಾಮಸ್ಥರಲ್ಲಿ ಭಯದ ವಾತಾವರಣ
ಪಂಡರವಳ್ಳಿ, ಕೊಳಗಾಮೆ ಹಾಗೂ ಏಳುನೂರ್ ಖಾನ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳು ರಸ್ತೆಗಳಲ್ಲಿ ಸಂಚರಿಸಲು ಸಹ ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹುಲಿ ಯಾವ ಕ್ಷಣದಲ್ಲಾದರೂ ಜನವಸತಿ ಪ್ರದೇಶದತ್ತ ಬರಬಹುದೆಂಬ ಆತಂಕ ಗ್ರಾಮಸ್ಥರನ್ನು ಕಾಡುತ್ತಿದೆ.
ಅರಣ್ಯ ಇಲಾಖೆ ಪರಿಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸುತ್ತಿದ್ದು, ಜನರು ಅನಗತ್ಯವಾಗಿ ಅರಣ್ಯ ಪ್ರದೇಶಗಳಿಗೆ ತೆರಳಬಾರದು ಹಾಗೂ ಅಧಿಕಾರಿಗಳ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಮನವಿ ಮಾಡಿದೆ.
ಉರುಳು ಹಾಕಿದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ
ಈ ಘಟನೆಯ ಬೆನ್ನಲ್ಲೇ ಪರಿಸರವಾದಿಗಳು ಹಾಗೂ ಸ್ಥಳೀಯ ಗ್ರಾಮಸ್ಥರು ಉರುಳು ಅಳವಡಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಕಾಡುಪ್ರಾಣಿಗಳ ಜೀವಕ್ಕೆ ಅಪಾಯ ಉಂಟುಮಾಡುವ ಇಂತಹ ಕೃತ್ಯಗಳನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಅಗತ್ಯವೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.












