ಬೆಂಗಳೂರು: ಕಾಂಗ್ರೆಸ್ ನಾಯಕರ ಮಾಧ್ಯಮ ಸಲಹೆಗಾರ ಎಂದು ನಂಬಿಸಿ, ವಿಧಾನ ಪರಿಷತ್ (MLC) ನಾಮನಿರ್ದೇಶನ ಮಾಡಿಸುವುದಾಗಿ ಹೇಳಿ ಮಂಗಳೂರು ಮೂಲದ ಮಹಿಳೆಯೊಬ್ಬರಿಗೆ ಸುಮಾರು ₹1.5 ಕೋಟಿ ವಂಚನೆ ಮಾಡಿರುವುದಲ್ಲದೆ, ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಸರ್ಕಾರಿ ಶಾಲೆಯ ಶಿಕ್ಷಕನ ವಿರುದ್ಧ ಹಲಸೂರುಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು ಮೂಲದ 54 ವರ್ಷದ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ, ಸಿರಿಗೆರೆ ನಿವಾಸಿ ಹಾಗೂ ಸರ್ಕಾರಿ ಶಾಲೆಯ ಶಿಕ್ಷಕ ಯರ್ರಿಸ್ವಾಮಿ, ಜೊತೆಗೆ ಸಿದ್ಧರಾಜು ಮತ್ತು ಬಸವರಾಜು ವಿರುದ್ಧ ಎಫ್ಐಆರ್ ದಾಖಲಾಗಿದೆ. 2024ರಿಂದ 2025ರ ಅವಧಿಯಲ್ಲಿ ಈ ಘಟನೆಗಳು ನಡೆದಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
MLC ಸ್ಥಾನ ಕೊಡಿಸುವ ಭರವಸೆ ನೀಡಿ ಕೋಟಿ ಕೋಟಿ ಹಣ ಪಡೆದ ಆರೋಪ
ದೂರಿನ ಪ್ರಕಾರ, ಆರೋಪಿಯು ತಾನು ಕಾಂಗ್ರೆಸ್ನ ಹಿರಿಯ ನಾಯಕರ ಮಾಧ್ಯಮ ಸಲಹೆಗಾರ ಎಂದು ಪರಿಚಯಿಸಿಕೊಂಡಿದ್ದನು. ಪಕ್ಷದ ಹಲವು ನಾಯಕರೊಂದಿಗೆ ಆತ್ಮೀಯ ಸಂಪರ್ಕವಿದ್ದು, ಮಹಿಳೆಯನ್ನು ಕಾಂಗ್ರೆಸ್ನಿಂದ ವಿಧಾನ ಪರಿಷತ್ ಸದಸ್ಯೆಯಾಗಿ (MLC) ನಾಮನಿರ್ದೇಶನ ಮಾಡಿಸುತ್ತೇನೆ ಎಂದು ನಂಬಿಸಿ ಹಂತ ಹಂತವಾಗಿ ಸುಮಾರು ₹1.5 ಕೋಟಿ ಪಡೆದು ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ.
ದೆಹಲಿ ಪ್ರವಾಸದ ವೇಳೆ ಲೈಂಗಿಕ ಕಿರುಕುಳ ಆರೋಪ
ಇದೇ ವೇಳೆ, ಎಐಸಿಸಿ ನಾಯಕರನ್ನು ಭೇಟಿಮಾಡಿಸುವುದಾಗಿ ಹೇಳಿ ಮಹಿಳೆಯನ್ನು ದೆಹಲಿಗೆ ಕರೆಸಿಕೊಂಡು ಹೋಟೆಲ್ನಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಬಳಿಕ ಹಣವನ್ನು ಹಿಂದಿರುಗಿಸುವಂತೆ ಕೇಳಿದಾಗ ಜೀವ ಬೆದರಿಕೆಯನ್ನೂ ಒಡ್ಡಲಾಗಿದೆ ಎಂದು ಮಹಿಳೆ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಮಹಿಳೆ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು. ದೂರಿನ ಪರಿಶೀಲನೆ ನಡೆಸಿದ ನ್ಯಾಯಾಲಯ, ಪ್ರಕರಣ ದಾಖಲಿಸಿ ತನಿಖೆ ಆರಂಭಿಸುವಂತೆ ಸೂಚಿಸಿದೆ. ಅಲ್ಲದೆ, ಆಗಸ್ಟ್ 25ರೊಳಗೆ ತನಿಖಾ ವರದಿ ಸಲ್ಲಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿದೆ.
ಮತ್ತಷ್ಟು ಓದಿ :











1 thought on “ಮಂಗಳೂರಿನ ಮಹಿಳೆಗೆ MLC ಸ್ಥಾನ ಕೊಡಿಸುವ ನೆಪ! ₹1.5 ಕೋಟಿ ವಂಚನೆ, ಲೈಂಗಿಕ ದೌರ್ಜನ್ಯ ಆರೋಪ – ಸರ್ಕಾರಿ ಶಿಕ್ಷಕನ ವಿರುದ್ಧ FIR”