ಬೆಳ್ತಂಗಡಿ : ಹಳೆಪೇಟೆಯ ಖಾಸಗಿ ವಿದ್ಯಾಸಂಸ್ಥೆಯ ಸಮೀಪ ಸೋಮವಾರ ಮಧ್ಯಾಹ್ನ ಕೆಎಸ್ಆರ್ಟಿಸಿ ಬಸ್ಸೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್ ಮೇಲೆರಿದ ಘಟನೆ ಸಂಭವಿಸಿದೆ. ಘಟನೆಯ ತೀವ್ರತೆಗೆ ಡಿವೈಡರ್ ಸೇರಿದಂತೆ ರಸ್ತೆ ಮಧ್ಯಭಾಗದಲ್ಲಿದ್ದ ಮೂಲಸೌಕರ್ಯಗಳಿಗೆ ಹಾನಿಯಾಗಿದೆ.
ಮಂಗಳೂರು ವಿಭಾಗಕ್ಕೆ ಸೇರಿದ ಮಂಗಳೂರಿನಿಂದ ಧರ್ಮಸ್ಥಳದತ್ತ ಸಂಚರಿಸುತ್ತಿದ್ದ ಸೂಪರ್ ಫಾಸ್ಟ್ ಬಸ್ ಏಕಾಏಕಿ ಹೆದ್ದಾರಿಯ ಬದಿಯ ಡಿವೈಡರ್ ಮೇಲೆರಿದಿದೆ. ಬಸ್ ಡಿವೈಡರ್ ಮೇಲೆ ಸಾಗಿದ ರಭಸಕ್ಕೆ ಸುಮಾರು 10 ಮೀಟರ್ಗಿಂತಲೂ ಹೆಚ್ಚಿನ ಉದ್ದದ ಡಿವೈಡರ್ ಹಾನಿಗೊಳಗಾಗಿದ್ದು, ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಘಟನೆಯ ವೇಳೆ ಡಿವೈಡರ್ನಲ್ಲಿದ್ದ ಕಬ್ಬಿಣದ ತಡೆಬೇಲಿ ಹಾಗೂ ದಾರಿದೀಪದ ಕಂಬ ಸಂಪೂರ್ಣ ಜಖಂಗೊಂಡಿವೆ. ಅಪಘಾತದ ಪರಿಣಾಮ ತಡೆಬೇಲಿಯ ಕಬ್ಬಿಣದ ರಾಡ್ ಬಸ್ನ ಮುಂಭಾಗವನ್ನು ಭೇದಿಸಿ ಒಳನುಗ್ಗಿದ್ದು, ಚಾಲಕನ ಸ್ಟೇರಿಂಗ್ ಭಾಗದ ಪಕ್ಕದಿಂದ ಹಾದು ಆತನ ಹಿಂದಿನ ಎರಡನೇ ಸೀಟಿನವರೆಗೂ ತಲುಪಿದೆ. ಈ ದೃಶ್ಯವನ್ನು ಕಂಡವರು ಅಪಘಾತದ ಭೀಕರತೆಯನ್ನು ವಿವರಿಸಿದ್ದಾರೆ.
ಆದರೆ ಬಸ್ನಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಿದ್ದ ಕಾರಣ ಯಾವುದೇ ಗಂಭೀರ ಅನಾಹುತ ಸಂಭವಿಸಿಲ್ಲ. ಕಬ್ಬಿಣದ ರಾಡ್ ಬಸ್ ಒಳಭಾಗಕ್ಕೆ ನುಗ್ಗಿದ್ದರೂ ಪ್ರಯಾಣಿಕರಿಗೆ ಪ್ರಾಣಾಪಾಯ ಉಂಟಾಗದಿರುವುದು ಅದೃಷ್ಟಕರ ಸಂಗತಿಯಾಗಿ ಪರಿಣಮಿಸಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಬೆಳ್ತಂಗಡಿ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ಕಾರಣವೇನು ಎಂಬ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.















3 thoughts on “ಬೆಳ್ತಂಗಡಿ : ಡಿವೈಡರ್ ಮೇಲೆರಿದ ಕೆಎಸ್ಆರ್ಟಿಸಿ ಬಸ್; ತಡೆಬೇಲಿ, ದಾರಿದೀಪದ ಕಂಬ ಜಖಂ, ಅದೃಷ್ಟವಶಾತ್ ಪ್ರಾಣಾಪಾಯ ತಪ್ಪಿತು”